ಯಕ್ಷಗಾನದಿಂದ ದೇಶೀಯ ಸಂಸ್ಕೃತಿಯನ್ನು ಉಳಿಸೋಣ - ಪ್ರೊ| ಎಂ. ಎಲ್. ಸಾಮಗ
ಲೇಖಕರು : ಉದಯವಾಣಿ
ಗುರುವಾರ, ಆಗಸ್ಟ್ 1 , 2013
|
ಮುಂಬಯಿ : ಡಾ| ಶಿವರಾಮ ಕಾರಂತರು ವಿಶಿಷ್ಟ್ಯ, ಅಪೂರ್ವ ವಿಚಾರ ಪೂರಿತ, ವಿಚಿತ್ರ, ಅದ್ಭುತ, ಇತ್ಯಾದಿಗಳನ್ನೊಳಗೊಂಡಂತೆ ಅವರದೇ ಚಿಂತನೆಯ ದಾರಿಯಲ್ಲಿ ಯಕ್ಷಗಾನವನ್ನು ಸೃಷ್ಟಿಸಿದ್ದಾರೆ. ಯಕ್ಷಗಾನ ಸಂಗೀತ ಮಾಧುರ್ಯಕ್ಕೆ ವಿಶೇಷ ಆದ್ಯತೆ ನೀಡಿ ಅದನ್ನು ಎತ್ತರಕ್ಕೆ ತರುವ ಪ್ರಯತ್ನ ಮಾಡಿ ವಿದೇಶಿಯರ ಗಮನವನ್ನೂ ಸೆಳೆದಿದ್ದಾರೆ. ಆ ಮೂಲಕ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಅವಿಸ್ಮರಣೀಯ ಪ್ರಯೋಗಗಳನ್ನು ಪ್ರದರ್ಶಿಸಿದ್ದಾರೆ. ಉಡುಪಿಯ ಯಕ್ಷ ಕೇಂದ್ರ ಆರಂಭವಾದ ದಿನದಿಂದ ಯಕ್ಷಗಾನವನ್ನು ಅತ್ಯಂತ ಗಾಢವಾಗಿ ಪ್ರೀತಿಸುವಂತೆ ಪ್ರೇಕ್ಷಕರನ್ನು ಸೃಷ್ಟಿಗೊಳಿಸಿದೆ. ಇಂದು ಕಾರ್ಪೂರೇಟ್ ಜಗತ್ತು ಕೂಡಾ ಶಾಸ್ತ್ರೀಯ ಕಲೆಗಳಿಗೆ, ಯಕ್ಷಗಾನಕ್ಕೆ ಈ ಮೂಲಕ ಆಕರ್ಷಿತಗೊಂಡು ಪ್ರಾಯೋಜಕತ್ವದ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಅಭಿಮಾನದ ಸಂಗತಿ ಎಂದು ಪ್ರೊ| ಎಂ. ಎಲ್. ಸಾಮಗ ಅವರು ನುಡಿದರು.
ಕರ್ನಾಟಕ ಸಂಘ, ಮುಂಬಯಿ ಡಾ| ವಿಶ್ವೇಶ್ವರಯ್ಯ ಸಭಾಗೃಹದಲ್ಲಿ 3 ದಿನಗಳ ಕಾಲ ಹಮ್ಮಿಕೊಂಡಿದ್ದ ಯಕ್ಷಗಾನ ಸಂದೇಶ ವಿನೂತನ ಕಾರ್ಯಕ್ರಮದ ಸಮಾರೋಪ ಸಮಾರಂಭವು ಜು. 29 ರಂದು ಸಂಜೆ ಜರಗಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬ್ರೆಕ್ಟ್ನ ಥಿಯೇಟರ್ ನಿಯಮದಂತೆ ಪ್ರೇಕ್ಷಕರು ತಮ್ಮನ್ನು ಮರೆಯಬಾರದು. ಇಂದು ಪ್ರೇಕ್ಷಕರು ತಮ್ಮನ್ನು ಮರೆಯದೆ ಯಕ್ಷಗಾನದ ಸವಿಯನ್ನು ಸವಿದಿದ್ದಾರೆ. ಈ ಬಾರಿ 3 ದಿನಗಳಲ್ಲಿ ಪ್ರೇಕ್ಷಕರು ತೋರಿದಂತಹ ಪ್ರೋತ್ಸಾಹ ಮೆಚ್ಚುಗೆ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ.
|
ವೇದಿಕೆಯ ಗಣ್ಯರನ್ನು ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಗೌರವಿಸಿದರು.
|
ಡಾ| ಕಾರಂತರು ಬೆಳೆಸಿದಂತಹ ಈ ಯಕ್ಷಗಾನದ ಮೂಲಕ ದೇಶಿಯವಾದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳೋಣ, ಅದನ್ನು ಬೆಳೆಸಲು ಪ್ರಯತ್ನಿಸೋಣ. ಶುದ್ಧರೂಪದಲ್ಲಿ ಇಂದು ಯಕ್ಷಗಾನವು ಉಳಿಯಲು ಕೇಂದ್ರದ ನಿರ್ದೇಶಕ ಬನ್ನಂಜೆ ಸಂಜೀವ ಸುವರ್ಣ ಅವರು ನಿರಂತರ ಕಷ್ಟಪಟ್ಟು ಶ್ರಮಿಸುತ್ತಿದ್ದಾರೆ. ಆದರೆ ಕೇಂದ್ರ ಮಾತ್ರ ಬಡವಾಗಿದೆ. ಅದನ್ನು ಸಹೃದಯ ಪ್ರೇಕ್ಷಕರು ತಮ್ಮ ತಮ್ಮ ನಿಟ್ಟಿನಲ್ಲಿ ಸಶಕ್ತಗೊಳಿಸಲು ಮುಂದೆ ಬರಬೇಕಾಗಿದೆ. ಇಂದು ಕಲಾವಿದರ ಸಹಿತ ನಾವೆಲ್ಲ ಕೂಪ ಪ್ರಜ್ಞೆ ಇಟ್ಟುಕೊಳ್ಳದೆ ಸಮುದ್ರದಂತೆ ವಿಶಾಲ ಮನೋಭಾವನೆ ಹೊಂದಿರಬೇಕು. ಆಗಲೇ ಯಾವ ಕಲೆಗಳು ಕೂಡಾ ಸಶಕ್ತವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅವರು ನುಡಿದರು.
ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಅಬುಧಾಬಿ ಕನ್ನಡ ಸಂಘದ ಸಂಚಾಲಕ ಲೇಖಕ, ಪತ್ರಕರ್ತ ಮನೋಹರ ತೋನ್ಸೆ ಅವರು ಮಾತನಾಡಿ, ನಿಜವಾದ ಅರ್ಥದಲ್ಲಿ ಈ ಯಕ್ಷ ಸಂದೇಶ ಕಾರ್ಯಕ್ರಮವು ಪ್ರೇಕ್ಷಕರಿಗೆ ರಸದೌತಣ ನೀಡಿದೆ. ಅದಕ್ಕೆ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆರೆದ ಕಲಾಭಿಮಾನಿಗಳೇ ಸಾಕ್ಷಿ. ಡಾ| ಕಾರಂತರು ಹಾಕಿಕೊಟ್ಟ ಚೌಕಟ್ಟಿನಲ್ಲಿ ಯಕ್ಷಗಾನವು ಇಲ್ಲಿ ಅಪೂರ್ವವಾಗಿ ಪ್ರದರ್ಶನಗೊಂಡಿದೆ. ಕಲಾವಿದರ ತರ್ಕಬದ್ಧವಾದ ಸಂಭಾಷಣೆಯಿಂದ ಅತ್ಯುತ್ತಮ ಗುಣಮಟ್ಟದ ಯಕ್ಷಗಾನ ಪ್ರದರ್ಶನವು ಪ್ರೇಕ್ಷಕರನ್ನು ಆಕರ್ಷಿಸಿರುವುದು ಸಂತೋಷ ತಂದಿದೆ. ಇಂತಹ ಯಕ್ಷಗಾನ ಪ್ರದರ್ಶನಕ್ಕೆ ಕಾರಣವಾದ ಕರ್ನಾಟಕ ಸಂಘ ಮುಂಬಯಿ ಅಭಿನಂದನೆಗೆ ಪಾತ್ರವಾಗಿದೆ ಎಂದರು.
ಸಂಘದ ಅಧ್ಯಕ್ಷ ಪ್ರಕಾಶ ಬುರ್ಡೆ ಅವರು ಪರಂಪರೆಯ ಯಕ್ಷಗಾನದ ಮಹತ್ವ, ಅದು ಈ ತನಕ ಜನರನ್ನು ಆಕರ್ಷಿಸುತ್ತಾ ಬಂದಿರುವುದನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಕಾರ್ಯಕ್ರಮವನ್ನು ಸಂಘದ ಉಪಾಧ್ಯಕ್ಷ ಡಾ| ಭರತ್ ಕುಮಾರ್ ಪೊಲಿಪು ನಿರ್ವಹಿಸಿದರು. ಯಕ್ಷ ಸಂದೇಶ ಕಾರ್ಯಕ್ರಮ ಕರ್ನಾಟಕ ಸಂಘವು ವೈಶಿಷ್ಟ್ಯಪೂರ್ಣವಾಗಿ ಹಮ್ಮಿಕೊಂಡಿದ್ದು ಈ 3 ದಿನಗಳಲ್ಲಿ ಪ್ರೇಕ್ಷಕರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿರುವುದು ಸಂಘದ ಮುಂದಿನ ಚಟುವಟಿಕೆಗಳಿಗೆ ಸ್ಪೂರ್ತಿಯಾಗಿದೆ ಎಂದರು.
ವೇದಿಕೆಯ ಗಣ್ಯರನ್ನು ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಗೌರವಿಸಿದರು. ಯಕ್ಷ ಸಂದೇಶ ಕಾರ್ಯಕ್ರಮವನ್ನು ಸಂಯೋಜನೆ ಮಾಡಿರುವ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ| ಎಂ. ಎಲ್. ಸಾಮಗ ಹಾಗೂ ತನ್ನ ವಿಭಿನ್ನ ಶೆ„ಲಿಯ ಭಾಗವತಿಕೆಯಿಂದ ಪ್ರೇಕ್ಷಕರನ್ನು ರಂಜಿಸಿದ ಭಾಗವತರಾದ ಸತೀಶ್ ಕೆದ್ಲಾಯ ಅವರನ್ನು ವೇದಿಕೆಯ ಗಣ್ಯರು ಶಾಲು ಹೊದಿಸಿ, ನೆನಪಿನ ಕಾಣಿಕೆ, ಪುಸ್ತಕ ಗೌರವ, ಪುಷ್ಪ ಗುತ್ಛವನ್ನಿತ್ತು ಸಮ್ಮಾನಿಸಿದರು. ವೇದಿಕೆಯಲ್ಲಿ ಗೋದ್ರೆಜ್ನ ದಕ್ಷಿಣ ವಿಭಾಗದ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಮುಖ್ಯಸ್ಥ ಗೋದ್ರೆಜ್ ಸಂಸ್ಥೆಯ ಜೆ. ವೆಂಕಟೇಶ್ ಅವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶಗೊಂಡಿತು.
ಕೃಪೆ : http://udayavani.com
|
|
|